ಈಶ ನಿನ್ನ ಚರಣ ಭಜನೆ ಆಶೆಯಿನ್ದ ಮಾಡುವೆನು
ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ
ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ॥1॥
ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ ॥ 2॥
ಹಿನ್ದನೇಕ ಯೋನಿಗಳಲಿ ಬನ್ದು ಬನ್ದು ನೊನ್ದೆ ನಾನು
ಇನ್ದು ಭವದ ಬನ್ಧ ಬಿಡಿಸು ತನ್ದೆ ಗೋವಿನ್ದನೆ ॥3॥
ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಮ್ಬೆ
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ॥4॥
ಮೊದಲು ನಿನ್ನ ಪಾದ ಪೂಜೆ ಮುದದಿ ಗೈವೆನಯ್ಯ ನಾನು
ಹೃದಯದೊಳಗೆ ಒದಗಿಸಯ್ಯ ಮಧುಸೂದನ ॥5॥
ಕವಿದುಕೊಣ್ಡು ಇರುವ ಪಾಪ ಸವೆದು ಹೋಗುವನ್ತೆ ಮಾಡಿ
ಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ ॥6॥
ಕಾಮಜನಕ ನಿನ್ನ ನಾಮ ಪ್ರೇಮದಿನ್ದ ಪಾಡುವನ್ಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ॥7॥
ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಇರುವ ಹಾಗೆ ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರ ॥8॥
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆನ್ದು
ಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ ॥9॥
ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಮ್ಬೆನಯ್ಯ ಭವದಿ
ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ॥10॥
ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು ಶ್ರೀಮಹಾನುಭಾವನಾದ ದಾಮೋದರ ॥11॥
ಪಙ್ಕಜಾಕ್ಷ ನೀನು ಎನ್ನ ಮಙ್ಕುಬುದ್ಧಿ ಬಿಡಿಸಿ ನಿನ್ನ
ಕಿಙ್ಕರನ್ನ ಮಾಡಿಕೊಳ್ಳೊ ಸಙ್ಕರುಷಣ ॥12॥
ಏಸು ಜನ್ಮ ಬನ್ದರೇನು ದಾಸನಲ್ಲವೇನೊ ನಿನ್ನ
ಘಾಸಿ ಮಾಡದಿರೋ ಎನ್ನ ವಾಸುದೇವನೆ ॥13॥
ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯ
ತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ ॥14॥
ಜನನಿ ಜನಕ ನೀನೆ ಎನ್ದು ಎನುವೆನಯ್ಯ ದೀನಬನ್ಧು
ಎನಗೆ ಮುಕ್ತಿ ಪಾಲಿಸಿನ್ದು ಅನಿರುದ್ಧನೆ ॥15॥
ಹರುಷದಿನ್ದ ನಿನ್ನ ನಾಮ ಸ್ಮರಿಸುವನ್ತೆ ಮಾಡು ನೇಮ
ಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ ॥16॥
ಸಾಧು ಸಙ್ಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ
ಭೇದ ಮಾಡಿ ನೋಡದಿರೋ ಅಧೋಕ್ಷಜ ॥17॥
ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ ॥18॥
ಸಞ್ಚಿತಾರ್ಥ ಪಾಪಗಳನು ಕಿಞ್ಚಿತಾದರುಳಿಯದನ್ತೆ
ಮುಞ್ಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ ॥19॥
ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ
ಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ ॥20॥
ಜಪತಪಾನುಷ್ಠಾನ ನೀನು ಒಪ್ಪುವನ್ತೆ ಮಾಡಲಿಲ್ಲ
ತಪ್ಪ ಕೋಟಿ ಕ್ಷಮಿಸಬೇಕು ಉಪೇನ್ದ್ರನೆ ॥21॥
ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ
ಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ ॥22॥
ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಬೇಡಿಕೊಮ್ಬೆ ನಾನು ಶ್ರೀಕೃಷ್ಣನೆ ॥23॥
ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ತಿಯಿನ್ದ ಕಾಯದಿರನು ಕರ್ತೃ ಕೇಶವ ॥24॥
ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆ
ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ ॥25॥